ಗೊರೇಬಾಳ:ಲಂಚ ಪಡೆದ ಪಿ.ಡಿ.ಓ ಗೆ ಜೈಲು ಶಿಕ್ಷೆ ಮತ್ತು ದಂಡ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು ::ತಾಲೂಕಿನ ಗೊರೇಬಾಳ ತಾಂಡಾದ ಚೇತನ ತಂದೆ ಲೋಕಪ್ಪ ಇವರು ದನದ ಶೆಡ್ ನಿರ್ಮಿಸಿದ್ದು ಅದಕ್ಕೆ ಸಹಾಯಧನವಾಗಿ ಸರಕಾರದಿಂದ ಹಣ ಬಂದಿದ್ದು ಸದರಿ ಗೋರೆಬಾಳ ಗ್ರಾಮಪಂಚಾಯತಿ ಪಿಡಿಓ ಆದ ಮಹ್ಮದ ಖಾಜಾ ಇವರು ಸಹಾಯಧನದ ಹಣದ ಬಿಡುಗಡೆಗಾಗಿ ರೂ: 15000-00 ಗಳ ಲಂಚದ ಬೇಡಿಕೆ ಇಟ್ಟಿದ್ದು ಸದರಿ ಲಂಚದ ಬೇಡಿಕೆ ಸಂಬಂಧಪಟ್ಟಂತೆ ಅಂದಿನ ಎ.ಸಿ.ಬಿ. ಪೋಲಿಸ ಠಾಣೆಗೆ ದಿನಾಂಕ: 22-11-2017 ರಂದು ಪಿರ್ಯಾದಿ ಸಲ್ಲಿಸಿದ್ದರು.
ಪಿರ್ಯಾದಿ ಆಧಾರದ ಮೇಲೆ 22-11-2017 ರಂದು ಪ್ರಕರಣ ದಾಖಲಿಸಿದ್ದು ಅಂದಿನ ಎ.ಸಿ.ಬಿ. ಪೋಲಿಸರು ಆಪಾದಿತನು ರೂ: 15,000-00 ಲಂಚ ಪಡೆಯುವ ಸಮಯದಲ್ಲಿ ಟ್ರಾಪ್ ಮಾಡಿ ಲಂಚದ ಸಮೇತ ಆಪಾದಿತನನ್ನು ಬಂಧಿಸಿರುತ್ತಾರೆ. ನಂತರ ಆಗಿನ ಪೋಲಿಸ್ ಇನ್ಸಪೆಕ್ಟರ್ ಶ್ರೀಧರ ದೊಡ್ಡಿ ಇವರು ದೋಷಾರೋಪಣೆ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಮಾನ್ಯ ನ್ಯಾಯಾಲಯವು ವಾದ ವಿವಾದಗಳನ್ನು ಆಲಿಸಿ 3ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ರಾಯಚೂರು ಫೀತಾಸೀನ ಲಿಂಗಸಗೂರು ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಬಿ.ಬಿ.ಜಕಾತಿ ರವರು ಇಂದು ದಿನಾಂಕ 10-4-2026 ರಂದು ಆರೋಪಿ ಲಿಂಗಸಗೂರು ತಾಲೂಕ ಗೋರೆಬಾಳ ಗ್ರಾಮಪಂಚಾಯತಿ ಪಿಡಿಓ ಆದ ಮಹ್ಮದ ಖಾಜಾ ಈತನಿಗೆ ಭ್ರಷ್ಟಚಾರ ಪ್ರತಿಬಂಧ ಕಾಯ್ದೆ 1988 ರ ಕಲಂ 7 ರಡಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ಹಾಗೂ 25,000-00 ರೂ. ದಂಡ ಹಾಗೂ ಕಲಂ 13(1)(ಡಿ) ಸಹಿತ 13(2) ಅಡಿಯಲ್ಲಿ 4ವರ್ಷ ಜೈಲು ಶಿಕ್ಷೆ ರೂ: 50,000-00 ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಪಿರ್ಯಾದಿದಾರನು ಮಾನ್ಯ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನೀಡಿದ್ದು ಮಾನ್ಯ ಸರಕಾರಿ ಅಭಿಯೋಜಕರು ಪಿರ್ಯಾದಿಯ ಮೇಲೆ ಪ್ರತಿಕೂಲ ಸಾಕ್ಷೀ ನೀಡಿದ್ದಕ್ಕಾಗಿ ಕ್ರಮ ಕೈಕೊಳ್ಳುವಂತೆ ಅರ್ಜಿ ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಿ ಮಾನ್ಯ ನ್ಯಾಯಾಲಯದ ಶಿರಸ್ತೇದಾರರಿಗೆ ಪಿರ್ಯಾದುದಾರನಾದ ಚೇತನ ತಂದೆ ಲೋಕಪ್ಪ ಸಾ: ಗೊರೇಬಾಳ ತಾಂಡಾ ಇವರ ಮೇಲೆ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷೀ ನೀಡಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ನೀಡಿರುತ್ತಾರೆ.


