ಹಾಲಬಾವಿ ಪ್ರಕರಣ : ಠಾಣೆಯಲ್ಲಿ ದೂರು ಪ್ರತಿದೂರು ದಾಖಲು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರ ಅ,೦7:
ಗೊರೆಬಾಳ ಗ್ರಾಮದ ವ್ಯವಸಾಯ ಸೇವಾ ಸಂಘದ ಉದ್ಘಾಟನೆಗೆ ಮಂಗಳವಾರ ಎಂಎಲ್ಸಿ ಶರಣಗೌಡ ಬಯ್ಯಾಪೂರ ಆಗಮಿಸಿದಾಗ ಎರಡು ಗುಂಪುಗಳ ಮಧ್ಯೆ ವಾಗ್ವಾದ ಗಲಾಟೆ ನಡೆದ ಘಟನೆಗೆ ಸಂಬಂಧಿಸಿದಂತೆ ಬುಧವಾರ ಸಂಜೆ ಹಾಗೂ ಗುರುವಾರ ಎರಡು ಗುಂಪುಗಳ ಠಾಣೆ ಮೆಟ್ಟಿಲೇರಿದ್ದು ಎರಡು ಗುಂಪುಗಳು ದೂರು ನೀಡಿದ್ದು ಲಿಂಗಸಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಂ.ಎಲ್ಸಿ ಶರಣಗೌಡ ಬಯ್ಯಾಪೂರ ಹಾಗೂ ನ.ಯೋ.ಪ್ರಾ ಅಧ್ಯಕ್ಷ ಭೂಪನಗೌಡ ಕರಡಕಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಪಾಮಯ್ಯ ಮುರಾರಿ ಕಾರ್ಯಕ್ರಮಕ್ಕೆ ಬಂದಾಗ ಕೆಲವರು ಏಕಾಏಕಿ ಅವರ ಕಾರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದನೆಗೆ ಮುಂದಾದ ಆರೇಳು ಜನರ ತಂಡ ತಡೆಯಲು ಯತ್ನಿಸಿದ ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಹಾಲಭಾವಿ ಗ್ರಾಮದ ಪ್ರೇಮಗೌಡ, ಚನ್ನಬಸವ, ಶಿವರಾಜ, ಮಂಜುನಾಥ, ಹನಮಗೌಡ, ಸಂಗಮೇಶ, ದೇವಪ್ಪ, ಗೊವಿಂದ ನಾಯಕ ವಿರುದ್ದ ಜಗದೀಶಗೌಡ ಎಂಬುವವರು ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭೂಪನಗೌಡ ಕರಡಕಲ್, ಚನ್ನಾರೆಡ್ಡಿ, ಜಗದೀಶಗೌಡ, ಶರಣಗೌಡ ಎಂಬುವವರ ವಿರುದ್ದ ಪ್ರತಿದೂರು ದಾಖಲಾಗಿದೆ.